
ನ. 23 ರಂದು ಹುಕ್ಕೇರಿಯಲ್ಲಿ ಕನ್ನಡದ ಹಬ್ಬ
22nd November 2024

*ಹುಕ್ಕೇರಿ* : ಕನ್ನಡಿಗರ ಸ್ವಾಭಿಮಾನದ ಸಂಕೇತವಾದ 69ನೇ ಕನ್ನಡ ರಾಜ್ಯೋತ್ಸವ ವೈಭವದ ಸಂಭ್ರಮಕ್ಕೆ ಹುಕ್ಕೇರಿ ಪಟ್ಟಣ ನವವಧುವಿನಂತೆ ಸಿಂಗಾರಗೊಂಡಿದೆ. ಭಾವೈಕ್ಯತೆಗೆ ಹೆಸರುವಾಸಿಯಾದ ಈ ನೆಲದಲ್ಲಿ ಇದೇ ತಿಂಗಳು ನ. 23 ರಂದು ಶನಿವಾರ ನಡೆಯಲಿರುವ ಕನ್ನಡ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ.
ನೆಲ-ಜಲ, ನಾಡು-ನುಡಿಗೆ ತನ್ನದೇಯಾದ ರೀತಿಯಲ್ಲಿ ವಿಶಿಷ್ಟ ಮತ್ತು ವಿಶೇಷವಾಗಿ ಕೊಡುಗೆ ಸಲ್ಲಿಸಿದ ಹುಕ್ಕೇರಿಯಲ್ಲಿ ಇದೀಗ ಕರ್ನಾಟಕ ರಾಜ್ಯೋತ್ಸವದ ವೈಭವ ಕಳೆಗಟ್ಟಿದೆ. ಇಡೀ ಪಟ್ಟಣದಲ್ಲಿ ಕನ್ನಡದ ಲವಲವಿಕೆ ಎದ್ದು ಕಾಣುತ್ತಿದೆ. ರಾಜ್ಯೋತ್ಸವದ ಸಂಭ್ರಮದ ಕ್ಷಣಗಳನ್ನು ಸವಿಯಲು, ದೃಶ್ಯಗಳನ್ನು ಕಣ್ತುಂಬಿಸಿಕೊಳ್ಳಲು ಕನ್ನಡ ಮನಸ್ಸುಗಳು ಕಾತರದಿಂದ ಕಾಯುತ್ತಿವೆ.
ಬೆಳಗಾವಿ ಮಾದರಿಯಲ್ಲಿ ಇಲ್ಲಿನ ಕರ್ನಾಟಕ ರಾಜ್ಯೋತ್ಸವ ಉತ್ಸಾಹಿ ಸಮಿತಿಯು ಪ್ರತಿ ವರ್ಷದಂತೆ ಈ ಬಾರಿಯೂ ಪಟ್ಟಣದಲ್ಲಿ ಈ ಕನ್ನಡದ ಜಾತ್ರೆ ಆಯೋಜಿಸುವ ಮೂಲಕ ಯಶಸ್ವಿ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ತನ್ಮೂಲಕ ನವೆಂಬರ್ ಕನ್ನಡಿಗರಾಗದೇ ನಿತ್ಯ ಕನ್ನಡಿಗರು ಎಂಬ ಸಂದೇಶ ಸಾರಿದೆ. ರಾಜ್ಯೋತ್ಸವ ಆಚರಣೆಯ ಎಲ್ಲ ಸಿದ್ಧತೆಗಳು ಭರದಿಂದ ಸಾಗಿದ್ದು ಅಂತಿಮ ಹಂತದಲ್ಲಿವೆ.
ಪಟ್ಟಣದ ಪ್ರಮುಖ ವೃತ್ತಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಆಯಕಟ್ಟಿನ ಸ್ಥಳಗಳಲ್ಲಿ ಸ್ವಾಗತ ಕಮಾನಗಳನ್ನು ನಿರ್ಮಿಸಲಾಗಿದೆ. ಪಟ್ಟಣ ಪ್ರವೇಶಿಸುವ ಮತ್ತು ಒಳ ರಸ್ತೆಗಳುದ್ದಕ್ಕೂ ಕನ್ನಡ ಧ್ವಜಗಳು, ತಳಿರು-ತೋರಣಗಳನ್ನು ಕಟ್ಟಲಾಗಿದೆ. ಪ್ರಮುಖ ಬೀದಿ ಮತ್ತು ವೃತ್ತಗಳನ್ನು ಕನ್ನಡ ಧ್ವಜದ ಬಣ್ಣಗಳ ಬಟ್ಟೆಗಳಿಂದ ಶೃಂಗರೀಸಲಾಗಿದೆ.
ರಾಜೇಶ್ವರಿ ವಿಶ್ವನಾಥ ಕತ್ತಿ ಧರ್ಮಾರ್ಥ ಸ್ಮಾರಕ ಟ್ರಸ್ಟ್, ಅನೇಕ ಸಂಘ-ಸಂಸ್ಥೆಗಳು, ಮುಖಂಡರು, ವ್ಯಾಪಾರಸ್ಥರು ಅದ್ದೂರಿ ರಾಜ್ಯೋತ್ಸವಕ್ಕೆ ಆರ್ಥಿಕ ನೆರವು ಕಲ್ಪಿಸಿವೆ. ಬೆಳಗ್ಗೆ 9ಕ್ಕೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಭವ್ಯ ಮೆರವಣಿಗೆಯಲ್ಲಿ ವಿವಿಧ ರೂಪಕಗಳು ಮತ್ತು ಕಲಾ ತಂಡಗಳು ನಾಡು-ನುಡಿ, ನೆಲ-ಜಲ, ಭಾಷೆ-ಸಂಸ್ಕೃತಿ, ಆಚಾರ-ವಿಚಾರವನ್ನು ಬಿಂಬಿಸಲಿವೆ. ಮಧ್ಯಾಹ್ನ 12 ರಿಂದ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಯಲ್ಲಿ ಸಂಗೀತದ ನಾದಮೇಳಕ್ಕೆ ಯುವಕರು ನೃತ್ಯಿಸಿ ಕುಣಿದು ಕುಪ್ಪಳಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಪಟ್ಟಣದಲ್ಲಿ ಕನ್ನಡ ಕಲರವ ಕೇಳಿ ಬರಲಿದ್ದು ಕನ್ನಡ ಧ್ವಜಗಳ ಹಾರಾಟ ಜೋರಾಗಲಿದೆ. ಕನ್ನಡದ ಅಸ್ಮಿತೆ ಅನಾವರಣವಾಗಲಿದೆ. ಕನ್ನಡದ ಅಬ್ಬರದ ಕೂಗು ಕಿವಿಗಪ್ಪಳಿಸಲಿದೆ. ಎಲ್ಲ ದಿಕ್ಕುಗಳಲ್ಲಿ ಕನ್ನಡದ ವಾತಾವರಣ ಇಮ್ಮಡಿಗೊಂಡಿದೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಸಹಸ್ರಾರು ಕನ್ನಡದ ಮನಸ್ಸುಗಳು ಸೇರುವ ನಿರೀಕ್ಷೆ ಇದೆ.
ಕರ್ನಾಟಕದ ಶ್ರೇಷ್ಠ ಸಾಹಿತ್ಯ ಪರಂಪರೆಗೆ ವಿಶ್ವ ಮನ್ನಣೆ ಇದೆ. ಕನ್ನಡಿಗರು ಅನ್ಯಧರ್ಮ ಹಾಗೂ ಪರರ ವಿಚಾರಗಳನ್ನು ಸಹಿಸಿಕೊಳ್ಳುವ ಚಿನ್ನದಂಥ ಜನರು ಎನ್ನುವುದನ್ನು ಮತ್ತೊಮ್ಮೆ ಸಾರುವ ಉದ್ದೇಶವೇ ಈ ಅದ್ದೂರಿ ರಾಜ್ಯೋತ್ಸವವಾಗಿದೆ.
- *
ರಮೇಶ ಕತ್ತಿ* , ಮಾಜಿ ಸಂಸದರು
ಕರ್ನಾಟಕ ರಾಜ್ಯೋತ್ಸವ ಚಿರನೂತನವಾಗಿಸುವ ಕನಸು ನನಸಾಗುತ್ತಿದೆ. ಕನ್ನಡದ ಹಬ್ಬವು ನಗರ ಹಾಗೂ ಗ್ರಾಮೀಣ ಜಾನಪದ ಸಂಸ್ಕೃತಿಗಳ ನಡುವೆ ಸ್ನೇಹ ಸೇತುವೆ ಕಟ್ಟಲಿದೆ. ಕರ್ನಾಟಕ, ಕನ್ನಡಭಾಷೆ ಇನ್ನಷ್ಟು ಪ್ರಜ್ವಲವಾಗಿ ಹೊಳೆಯಬೇಕಿದೆ.
- *ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ,* ಹಿರೇಮಠ

ಸರ್ಕಾರದ ಯೋಜನೆಗಳ ಯಶಸ್ಸಿಗೆ ಪ್ರಾಮಾಣಿಕತೆ ಅತ್ಯವಶ್ಯ. ಮುಸಲ್ಮಾರಿ ಕಾಂಕ್ರೆಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಅಮರನಾಥ ಜಾರಕೀಹೊಳಿ ಅಭಿಮತ.

ಕಾರ್ಯಸಿದ್ಧಿ ಆಂಜನೇಯನಿಗೆ ಕೊಳವೆ ಬಾವಿ. ದಾನಿ ದಯಾನಂದ ಪಾಟೀಲ ಕಾರ್ಯಕ್ಕೆ ವಿನಯ ನಾವಲಗಟ್ಟಿ ಶ್ಲ್ಯಾಘನೆ.

ಪ.ಜಾತಿ,ಪಂಗಡದ ಅಭಿವೃದ್ಧಿಗೆ ಇಟ್ಟ ಹಣ ದರ್ಬಳಿಕೆ ಖಂಡಿಸಿ ಮಾ.೪ ರಂದು ಬಿಜೆಪಿ ಪ್ರತಿಭಟನೆ